ಇರಾನ್ ಇಡೀ ಜಗತ್ತಿನ ಜನರ ಜೀವದ ಜೊತೆಗೆ ಆಟ ಆಡುತ್ತಿರುವ ರೀತಿ ಕಾಣುತ್ತಿದ್ದು, ನೋಡ ನೋಡುತ್ತಲೇ ಇರಾನ್ ಮಾಡಿಕೊಳ್ಳುತ್ತಿರುವ ಎಡವಟ್ಟು ಜಗತ್ತನ್ನು 3ನೇ ಮಹಾಯುದ್ಧದ ಕಡೆಗೆ ವಾಲಿಸುತ್ತಿರುವುದು ಭಯ ಹೆಚ್ಚು ಮಾಡ್ತಿದೆ. ಇದನ್ನೆಲ್ಲಾ ನೋಡುತ್ತಿದ್ದರೆ ಭವಿಷ್ಯದ ಬಗ್ಗೆಯೇ ಭಯ ಮೂಡಿದೆ ಅಂತಿದ್ದಾರೆ ತಜ್ಞರು, ಅದರಲ್ಲೂ ಮಧ್ಯಪ್ರಾಚ್ಯದಲ್ಲಿ ಇದೀಗ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದೆ. ಯಾವ ಕ್ಷಣದಲ್ಲಿ ಜ್ವಾಲಾಮುಖಿ ರೀತಿ ದಿಢೀರ್ ಎಲ್ಲಾ ಆಕ್ರೋಶಗಳ ಗೊಂಚಲು ಸ್ಫೋಟಗೊಳ್ಳುತ್ತೋ? ಎಂಬ ಚಿಂತೆಯಲ್ಲಿ ಜನರು ಇದ್ದಾರೆ. ಈ ಸಮಯದಲ್ಲೇ, ಇರಾನ್ ಕಿರಿಕ್ ಮತ್ತಷ್ಟು ಜೋರಾಗಿದ್ದು, ಡೊನಾಲ್ಡ್ ಟ್ರಂಪ್ ನಿರ್ಧಾರ ಏನು?
ಮತ್ತೊಂದು ಕಡೆಯಲ್ಲಿ ಮಧ್ಯಪ್ರಾಚ್ಯ ಭಾಗದ ಜೀವನಾಡಿ ಆಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಮತ್ತೊಮ್ಮೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಾಣಿಜ್ಯ ಸರಕು ಸಾಗಣೆ ಹಡಗುಗಳ ಮೇಲೆ ನಡೆದ ದಾಳಿಯ ಪರಿಣಾಮ ಹಡಗಿನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಸಿಬ್ಬಂದಿ ತುರ್ತಾಗಿ ಹಡಗಿನಿಂದ ಹೊರಬರಬೇಕಾದ ಸ್ಥಿತಿಯೂ ಎದುರಾಯಿತು. ಈ ಘಟನೆಯಲ್ಲಿ ಹಡಗಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾರತೀಯ ನಾವಿಕರ ಪೈಕಿ ಬಹುತೇಕ ಮಂದಿಯನ್ನ ಸುರಕ್ಷಿತವಾಗಿ ರಕ್ಷಿಸಲಾಗಿದ್ರೂ, ಆತಂಕದ ವಾತಾವರಣ ನಿರ್ಮಾಣ ಆಗಿದೆ. ಜಿಎಫ್ಎಸ್ ಗ್ಯಾಲಕ್ಸಿ ಹೆಸರಿನ ವಾಣಿಜ್ಯ ಹಡಗು ಗಂಭೀರ ಹಾನಿಗೊಳಗಾಗಿದೆ. ಬೆಂಕಿಯ ತೀವ್ರತೆಯಿಂದ ಹಡಗಿನ ಕಾರ್ಯಾಚರಣೆ ಸ್ಥಗಿತಗೊಂಡು, ಮುಂದಿನ ಸಂಚಾರ ನಡೆಸಲು ಸಾಧ್ಯವಾಗದ ಸ್ಥಿತಿಯೂ ನಿರ್ಮಾಣವಾಗಿದೆ.
ಇರಾನ್ ನಡೆಗೆ ಜಗತ್ತಿನಾದ್ಯಂತ ಆಕ್ರೋಶ
ಮಧ್ಯಪ್ರಾಚ್ಯ ಭಾಗದಲ್ಲಿ ಇರಾನ್ ನಡೆಸುತ್ತಿರುವ ಈ ರೀತಿಯ ದೌರ್ಜನ್ಯ ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗುತ್ತಿದ್ದು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ನೋಡ ನೋಡುತ್ತಲೇ ಜಗತ್ತಿನ ಆರ್ಥಿಕ ಪರಿಸ್ಥಿತಿ ನಲುಗುವಂತೆ ಈ ಬೆಳವಣಿಗೆ ಮಾಡುತ್ತಿದ್ದು, ತೈಲ ಬೆಲೆ ಮುಗಿಲು ಮುಟ್ಟುವ ಭೀತಿ ಆವರಿಸಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಿದ್ದು, ವಾಣಿಜ್ಯ ಹಡಗಿನ ಮೇಲಿನ ದಾಳಿ ಖಂಡಿಸಿದೆ. ಹಲವು ಬಾರಿ ಈ ಬಗ್ಗೆ ಮಾತುಕತೆ ನಡೆದರೂ ಮತ್ತೆ ಮತ್ತೆ ಇರಾನ್ ತನ್ನ ಮೊಂಡು ಹಠ ಮುಂದುವರಿಸಿ ಜಲಸಂಧಿಯಲ್ಲಿ ದಾಳಿಯ ನಡೆಸುವ ಮೂಲಕ ಆತಂಕ ಹೆಚ್ಚಿಸಿದೆ.
ಇನ್ನು ಸಚಿವಾಲಯದ ಮಾಹಿತಿ ಪ್ರಕಾರ, ಹಡಗಿನಲ್ಲಿ ಇದ್ದವರಲ್ಲಿ ಒಟ್ಟು 10 ಜನರ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಮತ್ತೊಂದು ಕಡೆ ಇನ್ನೊಬ್ಬರು ನಾಪತ್ತೆ ಆಗಿದ್ದಾರೆ ಎನ್ನಲಾಗಿದ್ದು, ಹುಡುಕಾಟ ತೀವ್ರಗೊಂಡಿದೆ. ಇರಾನ್ ಪದೇ ಪದೇ ಈ ರೀತಿಯಾಗಿ ಮಾಡುತ್ತಿದ್ದು, ಈಗಾಗಲೇ ಟ್ರಂಪ್ ಅವರು ಎಚ್ಚರಿಕೆ ಸಂದೇಶ ರವಾನಿಸಿದ್ದರು. ಇಷ್ಟಾದರೂ, ಇರಾನ್ ನಾಯಕರು ಮಾತ್ರ ಬುದ್ಧಿಯನ್ನ ಕಲಿತಂತೆ ಕಾಣುತ್ತಿಲ್ಲ. ಈಗಾಗಲೇ ಅಮೆರಿಕ ಕೂಡ ಇರಾನ್ ಹಡಗು ಹಾಗೂ ಕ್ಷಿಪಣಿ ಸಂಗ್ರಹ ಇರುವ ಜಾಗಗಳ ಮೇಲೆ ಭಾರಿ ದೊಡ್ಡ ಮಟ್ಟದಲ್ಲಿ ದಾಳಿಯನ್ನು ಆರಂಭಿಸಿ ಬುದ್ಧಿ ಕಲಿಸಲು ಮುಂದಾಗಿದೆ.
ಭಾರತೀಯ ನಾಗರಿಕರ ಸುರಕ್ಷತೆಗೆ ಆದ್ಯತೆ
ಇಷ್ಟೆಲ್ಲದರ ನಡುವೆ ಮತ್ತೊಂದು ಕಡೆಯಲ್ಲಿ ಒಮನ್ನಲ್ಲಿ ಇರುವ ಭಾರತೀಯ ರಾಯಭಾರ ಕಚೇರಿ, ಸ್ಥಳೀಯ ಆಡಳಿತ & ರಕ್ಷಣಾ ತಂಡಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನಾಪತ್ತೆಯಾದ ಸಿಬ್ಬಂದಿ ಪತ್ತೆಹಚ್ಚಲು ಅಗತ್ಯ ಸಹಕಾರ ನೀಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಿಸ್ಥಿತಿ ಕ್ಷಣಕ್ಷಣಕ್ಕೂ ಗಮನಿಸಲಾಗುತ್ತಿದ್ದು, ಭಾರತೀಯ ನಾಗರಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ. ಹಾಗೇ ಅಮೆರಿಕ ಕೂಡ ಇರಾನ್ ವಿರುದ್ಧ ದೊಡ್ಡದಾಗಿ ದಾಳಿ ನಡೆಸುವ ಭೀತಿ ಆವರಿಸಿದ್ದು, ಸೌದಿ ಅರೇಬಿಯಾ, ಯುಎಇ ಹಾಗೂ ಕತಾರ್ ಸೇರಿ ಸುತ್ತಮುತ್ತ ಅಮೆರಿಕ ಸೇನಾ ನೆಲೆ ಇರುವ ದೇಶಗಳಲ್ಲಿ ಭೀತಿ ಆವರಿಸಿದೆ.