ಅದು ಜುಲೈ 20, ಕೋಟ್ಯಂತರ ಅಭಿಮಾನಿಗಳ ಎದೆಯಲ್ಲಿ ಸ್ಪೇನ್ ಹೊಸ ಇತಿಹಾಸ ಬರೆದಿತ್ತು. ಫುಟ್ಬಾಲ್ ಜಗತ್ತಿನಲ್ಲಿ ಮತ್ತೆ ಮತ್ತೆ ವಿಶ್ವಕಪ್ ಗೆದ್ದು ಸಾಧನೆ ಮಾಡಿದ ಕೆಲವೇ ದೇಶಗಳ ಪೈಕಿ ತಾನೂ ಆ ಪಟ್ಟಿಗೆ ಸೇರಿತ್ತು. ಪ್ರಪಂಚದ ಮೂಲೆ ಮೂಲೆಯಲ್ಲೂ ಕೋಟ್ಯಂತರ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರು. ಸ್ಪೇನ್ ಗೆಲುವು ಭರ್ಜರಿ ಸಂಭ್ರಮ ಮನೆ ಮಾಡುವಂತಹ ವಾತಾವರಣ ಸೃಷ್ಟಿಸಿತ್ತು. ಆದ್ರೆ ಹೀಗೆ ಫುಟ್ಬಾಲ್ ವಿಶ್ವಕಪ್ ಗೆದ್ದು ಆ ಮೂಲಕ ಫೀಫಾ ಟೋರ್ನಿಯಲ್ಲಿ ತಾನೇ ಬಾಸ್ ಎಂದು ತೋರಿಸಿಕೊಂಡಿದ್ದ ಸ್ಪೇನ್ಗೆ ಇದೀಗ ಆಘಾತವೇ ಎದುರಾಗಿದೆ. ಹಾಗಿದ್ರೆ ದಿಢೀರ್ ಏನಾಯ್ತು ಯುರೋಪ್ ಖಂಡದ ದೇಶ ಸ್ಪೇನ್ ನೆಲದಲ್ಲಿ? ಬನ್ನಿ ತಿಳಿಯೋಣ ಈ ಬಗ್ಗೆ ಮಹತ್ವದ ಮಾಹಿತಿ.
ಅಂದಹಾಗೆ ಯುರೋಪ್ ದೇಶಗಳು ಶ್ರೀಮಂತ ರಾಷ್ಟ್ರಗಳು ಎಂಬ ಬಿರುದು ಪಡೆದಿವೆ, ಏಕೆಂದರೆ ಜಗತ್ತಿನ ಹಲವು ದೇಶಗಳನ್ನು ನೂರಾರು ವರ್ಷ ತಮ್ಮ ಮುಷ್ಠಿಯಲ್ಲಿ ಇಟ್ಟುಕೊಂಡು ಆಳಿದ್ದು ಇದೇ ಯುರೋಪ್ ಖಂಡದ ದೇಶಗಳು. ಹೀಗೆ ಶತ ಶತಮಾನಗಳ ಕಾಲ ನೂರಾರು ದೇಶಗಳ ಸಂಪತ್ತು ಹೀರಿ ಶ್ರೀಮಂತವಾದ ಯುರೋಪ್ ಖಂಡ, ಇದೀಗ ವಿಲವಿಲ ಒದ್ದಾಡುತ್ತಿದೆ. ಯುರೋಪ್ ಪಾಡು ಬೀದಿಗೆ ಬಿದ್ದಿದೆ ಅಂತಿದ್ದಾರೆ ತಜ್ಞರು, ಯಾಕಂದ್ರೆ ಕೊರೊನಾ ನಂತರ ಯುರೋಪ್ನಲ್ಲಿ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದೆ. ಈ ಅವಾಂತರಗಳ ಜೊತೆಗೆ ಇನ್ನೋ ಒಂದು ಕಂಟಕ ಇದೀಗ ಯುರೋಪ್ ನೆಲವನ್ನು ಕಾಡುತ್ತಿದ್ದು, ಬೆಂಕಿಯೇ ಹೊತ್ತಿಕೊಂಡಿದೆ ಸ್ಪೇನ್ ನೆಲದಲ್ಲಿ ಈಗ.
60,000ಕ್ಕೂ ಹೆಚ್ಚು ವಲಸಿಗರ ಎಂಟ್ರಿ?
ಹೌದು ಮೊರೊಕ್ಕೊ ನೆಲದಿಂದ ಸ್ಪೇನ್ ದೇಶದ ಸ್ವಾಯತ್ತ ಪ್ರದೇಶ ಸಿಯುಟಾಗೆ ಅಕ್ರಮವಾಗಿ ಎಂಟ್ರಿ ಕೊಡಲು ಪ್ರಯತ್ನ ಮಾಡಿದ್ದ ಅಕ್ರಮ ವಲಸಿಗರ ಮೇಲೆ ಭೀಕರ ಗುಂಡಿನ ದಾಳಿ ನಡೆದಿದೆ. ಈ ಘಟನೆ ಬೆಂಕಿಯನ್ನೇ ಹೊತ್ತಿಸಿದ್ದು, ಇಡೀ ಸ್ಪೇನ್ ನಲುಗಿ ಹೋಗುವಂತೆ ಆಗಿದೆ. ಘಟನೆ ಪರಿಣಾಮ 41ಕ್ಕೂ ಹೆಚ್ಚು ವಲಸಿಗರು ಮೃತಪಟ್ಟಿರುವ ಆರೋಪ ಕೇಳಿ ಬಂದಿದ್ದು, 60,000ಕ್ಕೂ ಹೆಚ್ಚು ವಲಸಿಗರು ಅಕ್ರಮವಾಗಿ ಸ್ಪೇನ್ ದೇಶದ ಸ್ವಾಯತ್ತ ಪ್ರದೇಶ ಸಿಯುಟಾಗೆ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಿಯುಟಾದ ಪ್ರಾದೇಶಿಕ ಅಧ್ಯಕ್ಷ ಜುವಾನ್ ಜೀಸಸ್ ವಿವಾಸ್ ಈ ವಿಚಾರ ದೃಢಪಡಿಸಿದ್ದು ಇನ್ನಷ್ಟು ತಲ್ಲಣ ಎಬ್ಬಿಸಿದೆ ಇದೀಗ.
ಅಂದಹಾಗೆ ಕಳೆದ 24 ಗಂಟೆಯ ಒಳಗೆ ಈ 60,000ಕ್ಕೂ ಹೆಚ್ಚು ವಲಸಿಗರು ಮೊರೊಕ್ಕೊ ಟು ಸ್ಪೇನ್ನ ಪ್ರದೇಶ ಸಿಯುಟಾಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ ಎಂದು ವಿವಾಸ್ ಹೇಳಿರುವುದು ಕಿಚ್ಚು ಇನ್ನಷ್ಟು ಹೆಚ್ಚಿಸಿದೆ. ಇದೇ ಸಮಯದಲ್ಲಿ ಉತ್ತರ ಮೊರೊಕ್ಕೊ ಗಡಿಭಾಗದ ಸಿಯುಟಾ, ಕಳೆದ ಕೆಲ ದಿನಗಳಿಂದಲೂ ಉದ್ವಿಗ್ನ ಸ್ಥಿತಿಯನ್ನ ಎದುರಿಸುತ್ತಿದೆ. ಹೀಗಿದ್ದಾಗ ಗಡಿ ದಾಟಲು ಯತ್ನಿಸಿದ ವಲಸಿಗರು & ಭದ್ರತಾ ಪಡೆಗಳ ನಡುವೆ ತೀವ್ರ ಘರ್ಷಣೆ ನಡೆದಿದೆ ಎಂದು ಸ್ಥಳೀಯ ಆಡಳಿತ ಖಚಿತಪಡಿಸಿದೆ ಅಂತಾ ಈಗ, ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ಮೂಲಕ ಯುರೋಪ್ ಹೊಸ ಸಮಸ್ಯೆ ಸುಳಿಗೆ ಸಿಲುಕಿದ್ದು, ಸ್ಪೇನ್ ಕ್ರಮಕ್ಕೆ ಪರ & ವಿರೋಧದ ಚರ್ಚೆ ಜೋರಾಗಿದೆ.
ಹೆಚ್ಚುವರಿ ಸೈನಿಕರು & ಪೊಲೀಸರ ನಿಯೋಜನೆ
ಘಟನೆ ಬೆನ್ನಲ್ಲೇ ಸಿಯುಟಾ ಭಾಗದಲ್ಲಿ ಭದ್ರತೆಯನ್ನ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸ್ಪೇನ್ ಸರ್ಕಾರ ಹೆಚ್ಚುವರಿ ಸೈನಿಕರು, ಪೊಲೀಸ್ ಸಿಬ್ಬಂದಿ, ಜಲಾಂತರ್ಗಾಮಿ, ಡ್ರೋನ್ಗಳು & ಗಸ್ತು ದೋಣಿಗಳನ್ನು ಇದೀಗ ನಿಯೋಜಿಸಿದೆ. ಹಾಗೇ ಈ ಭಾಗದಲ್ಲಿ ಗಡಿಯುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿ, ಅಕ್ರಮ ಪ್ರವೇಶ ತಡೆಯಲು ತುರ್ತು ಕ್ರಮಗಳನ್ನ ಜಾರಿಗೆ ತರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ ಸ್ಥಳೀಯ ಸರ್ಕಾರಿ ಅಧಿಕಾರಿಗಳು. ಈ ದುರ್ಘಟನೆ ಬಗ್ಗೆ ಚರ್ಚೆ ಜೋರಾದ ಸಮಯದಲ್ಲೇ, ಸ್ಪೇನ್ ಮಾಡಿದ್ದು ತಪ್ಪು & ಶಾಂತಿಯುತ ಮಾರ್ಗದಲ್ಲಿ ಪರಿಸ್ಥಿತಿ ನಿಭಾಯಿಸಬೇಕು ಎಂಬ ಕೂಗು ಕೂಡ ದೊಡ್ಡದಾಗಿ ಕೇಳಿಬರುತ್ತಿದೆ.